ಮೀನು ಹಿಡಿಯಲು ಮುಗಿಬಿದ್ದ ಮಂದಿಒಮ್ಮೆಗೇ ಕೆರೆಗೆ ಧುಮುಕಿ ಜಾಲಾಡಿದ ನೂರಾರು ಜನ

ಮೀನು ಹಿಡಿಯಲು ಮುಗಿಬಿದ್ದ ಮಂದಿ
ಒಮ್ಮೆಗೇ ಕೆರೆಗೆ ಧುಮುಕಿ ಜಾಲಾಡಿದ ನೂರಾರು ಜನ
ಅರಕಲಗೂಡು: ನಮ್ಮ ಜನರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ.
ಕೊರೊನಾ ಮಹಾಮಾರಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದರೂ, ಯಾವುದೇ ಸಲಹೆ ಸೂಚನೆಗೂ ಗ್ರಾಮೀಣ ಜನರು ಕ್ಯಾರೇ ಎನ್ನುತ್ತಿಲ್ಲ ಎಂಬುದಕ್ಕೆ ತಾಲೂಕಿನ ಗಡಿಗ್ರಾಮ ಅನೇಮಾರನಹಳ್ಳಿಯ ಕೆರೆಯಲ್ಲಿ ಸಾಮೂಹಿಕವಾಗಿ ಮೀನು ಹಿಡಿದಿದ್ದು ಕಣ್ಣ ಮುಂದಿನ ಉದಾಹರಣೆಯಾಗಿದೆ.
ಸ್ಥಳೀಯರು ಹಾಗೂ ನೆರೆ ಹೊರೆಯ ಗ್ರಾಮಗಳ ನೂರಾರು ಮಂದಿ ಕೂಳಿ ಹಿಡಿದು ಒಮ್ಮೆಗೇ ಕೆರೆಗೆ ಇಳಿದು ಮೀನು ಹಿಡಿಯುವುದಲ್ಲಿ ಮಗ್ನರಾಗಿದ್ದರು. ಯಾರೊಬ್ಬರಲ್ಲೂ ಕೊರೊನಾ ಭಯ ಕಿಂಚಿತ್ ಕಂಡು ಬರಲಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಯಾರಲ್ಲೂ ಕಾಣಲೇ ಇಲ್ಲ. ಹಿಂದು ಮುಂದು ಆಲೋಚಿಸದೆ ನೂರಾರು ಮಂದಿ ಒಮ್ಮೆಗೇ ಕೆರೆಗೆ ಇಳಿದರೆ ಹೆಚ್ಚು ಕಡಿಮೆ ಅಷ್ಟೇ ಮಂದಿ ಕೆರೆಯ ದಡದಲ್ಲಿ ಗುಂಪು ಗುಂಪಾಗಿ ನಿಂತು ವೀಕ್ಷಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 
ಅರಕಲಗೂಡು ತಾಲೂಕು ಸೇರಿದಂತೆ ಜಿಲೆಯಲ್ಲಿ ಡೆಡ್ಲಿ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧಬಾಹು ಚಾಚುತ್ತಲೇ ಇದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಯಾರೂ ಕೂಡ ಅನಗತ್ಯವಾಗಿ ಸಾರ್ವಜನಿಕವಾಗಿ ಓಡಾಡಬಾರದು ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪದೇ ಪದೇ ಮನವಿ ಮಾಡುತ್ತಿದ್ದರೂ, ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಜನರು ಮೀನು ಹಿಡಿಯಲು ಮುಗಿ ಬಿದ್ದಿದ್ದು ನೋಡಿದರೆ ಇವರಿಗೆ ಜೀವಕ್ಕಿಂತ ಮೀನು ಹಿಡಿದು ಬಾಯಿ ಚಪಲ ತೀರಿಸಿಕೊಳ್ಳುವುದೇ ಮುಖ್ಯ ಎನಿಸಿದ್ದು ಸುಳ್ಳಲ್ಲ.

Post a Comment

0 Comments